Saturday, October 11, 2008

ಕಿಡಿಗೇಡಿಗಳ ಕೃತ್ಯಕ್ಕೆ ವ್ಯಾಪಕ ಖಂಡನೆ

ಶ್ರೀ ಕ್ಷೇತ್ರ ಗೋಕರ್ಣದ ಅಭಿವೃದ್ಧಿ ಸಹಿಸದ ಕೆಲ ಕಿಡಿಗೇಡಿಗಳು ತಮ್ಮ ಸ್ವಂತ ಹಿತಾಸಕ್ತಿಗೆ ಹೆಜ್ಜೆಹೆಜ್ಜೆಗೂ ತೊಂದರೆ ನೀಡುತ್ತಿರುವುದಕ್ಕೆ ಎಲ್ಲೆಡೆಯಿಂದ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.

ಏತನ್ಮಧ್ಯೆ ತಾಪಂ ಸದಸ್ಯ ಆನಂದು ಕವರಿ, ಅರುಣ ನಾಯ್ಕ, ಪ್ರದೀಪ ನಾಯಕ, ನಾಗರಾಜ ಹಿತ್ತಲಮಕ್ಕಿ ಅವರ ನೇತೃತ್ವದಲ್ಲಿ ಸ್ಥಳೀಯ ಸಾವಿರಾರು ನಾಗರಿಕರು ಹಾಗೂ ಶ್ರೀ ರಾಮಚಂದ್ರಾಪುರ ಮಠದ ಕಾರ್ಯಕರ್ತರು ಗುರುವಾರವೇ ರಥಬೀದಿಯಿಂದ ಕಡಲತೀರದವರೆಗೆ ಮೆರವಣಿಗೆ ನಡೆಸಿ ಆರೋಪಿಗಳನ್ನು ಬಂದಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿದರು.

ಶ್ರೀ ಮಠದ ಕಾರ್ಯಕರ್ತನೊಬ್ಬನ ಮೇಲೆ ಈಗ ಹಲ್ಲೆ ನಡೆಸಲಾಗಿದ್ದು, ಸಜೀವ ದಹನದ ಯತ್ನ ಮಾಡಿರುವುದು ಹೇಯ ಕೃತ್ಯ ಎಂದು ಸ್ಥಳೀಯ ಪಂಚಾಯಿತಿ ಸದಸ್ಯ ಶೇಖರ ನಾಯಕ ಹಾಗೂ ಎಂ. ಕೆ.ಹೆಗಡೆ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಗುರುವಾರ ಅವರು ಮಾತನಾಡಿ, ಹೇಳಿದ್ದಿಷ್ಟು: ಬುಧವಾರ ಸಂಜೆ ಕೆಲವರು ದೇವಾಲಯದ ಆಡಳಿತ ಕಚೇರಿ ಎದುರು ಧರಣಿ ನಡೆಸಿದ್ದಾರೆ. ದೀರ್ಘ ಕಾಲದಿಂದ ಪರಿಷ್ಕರಣೆ ಹಾಗೂ ನವೀಕರಣವಾಗದ ಉಪಾವಂತಿಕೆ ಕುರಿತು ವಿವರ ಸಲ್ಲಿಸುವಂತೆ ಕೋರಲಾಗಿತ್ತು. ಈ ಬಗ್ಗೆ ಅನೇಕರು ಅರ್ಜಿ ಸಲ್ಲಿಸಿದ್ದಾರೆ. ಆದರೆ ಕೆಲವರು ವಿಷಯಕ್ಕೆ ಸಂಬಂಧವೇ ಇಲ್ಲದ ವಿಚಾರಗಳನ್ನು ನಮೂದಿಸಿ ಅರ್ಜಿ ನೀಡಿದ್ದಾರೆ. ಇಂತಹ ವೇಳೆಯಲ್ಲಿ ಈ ಕುರಿತು ಸ್ವೀಕೃತಿ ಪತ್ರ ನೀಡಲು ಒತ್ತಾಯಿಸಿ ದಾಂಧಲೆ ನಡೆಸಿರುವುದು ವಿಷಾದನೀಯ.

ಕಾರ್ಯಕರ್ತರಲ್ಲಿ ಜೀವ ಭಯ:
ತೀವ್ರ ಗತಿಯಲ್ಲಿ ದೇವಾಲಯದ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಇದರಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಯ ಮೇಲೆ ನಡೆಸಿರುವ ಹಲ್ಲೆಯಿಂದ ಸಹಜವಾಗಿಯೇ ಕಾರ್ಯಕರ್ತರು ಜೀವ ಭಯಕ್ಕೊಳಗಾಗಿದ್ದಾರೆ. ಈ ಕುರಿತು ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಸ್ಥಳೀಯ ಪೊಲೀಸ್ ಅಕಾರಿಗಳಿಗೆ ಕೋರಲಾಗಿದೆ. ಶ್ರೀ ಮಠದ ಆಡಳಿತಕ್ಕೆ ದೇವಾಲಯ ಒಳಪಟ್ಟ ದಿನದಿಂದ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಕಂಡು ಸಹಿಸಲಾಗದ ಕೆಲವೇ ವ್ಯಕ್ತಿಗಳು ಇಂಥ ಹತಾಶ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಅವರು ಹೇಳಿದರು.

ಪಂಚಾಯಿತಿ ಉಪಾಧ್ಯಕ್ಷೆ ಭಾರತಿ ದೇವತೆ, ಸದಸ್ಯ ಮಹೇಶ ಶೆಟ್ಟಿ, ಉಪಾವಂತ ಮಂಡಳಿ ಅಧ್ಯಕ್ಷ ಗಣೇಶ ಹಿರೇಗಂಗೆ, ಅರುಣ ನಾಯಕ, ಭಾಸ್ಕರ ನಾಯಕ, ಶೇಖರ ನಾಯಕ, ಹರಿಹರ ಮೂಡಂಗಿ, ಪ್ರಕಾಶ ಮೂಡಂಗಿ, ರಾಜನ್ ಕುರ್ಲೆ, ಗೋವಿಂದ ಗೌಡ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

No comments: