Saturday, October 4, 2008

ಗೋಕರ್ಣ ದೇವಾಲಯ ಸಮಸ್ತರ ಸ್ವತ್ತು : ರಾಘವೇಶ್ವರ ಶ್ರೀ

ಗೋಕರ್ಣ, ಸೆ.೩೦ - ಸರ್ಕಾರ ಶ್ರೀರಾಮಚಂದ್ರಾಪುರಮಠಕ್ಕೆ ಹಸ್ತಾಂತರಿಸಿದ ದೇವಾಲಯ ಸಮಸ್ತರ ಸ್ವತ್ತು. ಆದ್ದರಿಂದ ಇದನ್ನು ಸಮಸ್ತರಿಗೂ ಸಲ್ಲುವಂತೆ ಸಮರ್ಪಿಸುತ್ತಿದ್ದೇವೆ ಎಂದು ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ಹೇಳಿದರು.

ಹಾಲಕ್ಕಿ ಮತ್ತು ಪಡಸಾಲಿ ಸಮಾಜದ ಸಮಸ್ತರೂ ಆತ್ಮಲಿಂಗಕ್ಕೆ ವಿಶೇಷ ಪೂಜಾಸೇವೆಯನ್ನು ನೆರವೇರಿಸಿದ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ವಿಶೇಷ ಸಭೆಯಲ್ಲಿ ಶ್ರೀ ಸ್ವಾಮೀಜಿ ಮಾತನಾಡುತ್ತಿದ್ದರು.

ಗೋಕರ್ಣದ ಇತಿಹಾಸದಲ್ಲಿಯೇ ಇಂತಹದ್ದೊಂದು ಸಂಗತಿ ಹೊಸತು. ಗೋಕರ್ಣದ ಸುತ್ತಮುತ್ತಲಿನ ೩೦ಕ್ಕೂ ಹೆಚ್ಚು ಸಮುದಾಯಗಳವರು ದೇವಾಲಯಕ್ಕೆ ನಡೆದುಕೊಳ್ಳುತ್ತಿದ್ದಾರೆ. ಅವರಲ್ಲಿ ಸುಮಾರು ೩೫ ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿರುವ ಹಾಲಕ್ಕಿ ಮತ್ತು ಪಡಸಾಲಿ ಸಮಾಜದವರು ಸೇವೆ ಕೈಗೊಂಡದ್ದು ತಮಗೆ ಬಹಳ ಸಂತೋಷವನ್ನು ಉಂಟುಮಾಡಿದೆ ಎಂದರು.

ಹಾಲಕ್ಕಿ ಸಮಾಜದ ನಾಗಪ್ಪ ಗೌಡ ಮತ್ತು ಪಡಸಾಲಿ ಸಮಾಜದ ಪದ್ಮನಾಭ ತಮ್ಮ ತಮ್ಮ ಸಮುದಾಯಗಳ ಸ್ಥಿತಿಗತಿಗಳನ್ನು ಶ್ರೀ ಸ್ವಾಮೀಜಿಯವರಲ್ಲಿ ಅರಿಕೆ ಮಾಡಿಕೊಂಡರು.

No comments: