Sunday, September 21, 2008

ಸ್ವಾಮೀಜಿಯವರನ್ನು ಜರೆಯುವುದು ಯೋಗ್ಯವಲ್ಲ

ನಮ್ಮ ದೇಶದಲ್ಲಿ ಹಿಂದೂಗಳೇ ಹಿಂದೂಗಳ ಕಾಲು ಜಗ್ಗುತ್ತಾರೆ. ಹಾಗೆಯೇ ನಮ್ಮ ಹವ್ಯಕ ಸಮಾಜದಲ್ಲಿಯೂ ಸಮಾಜ ಬಾಂಧವರೇ (ಕೊಡಲಿ ಕಾವು ಕುಲಕ್ಕೆ ಮೃತ್ಯು ಎಂಬಂತೆ) ನಮ್ಮವರ ಕಾಲೆಳೆಯುತ್ತಾರೆ. ಅದಕ್ಕೇ ಈ ಸಮಾಜ ನಿರೀಕ್ಷಿತ ಪ್ರಗತಿ ಸಾಧಿಸಲಿಕ್ಕಾಗುತ್ತಿಲ್ಲ. ಇದಕ್ಕೆ ತಾಜಾ ಉದಾಹರಣೆ, ಪ್ರಜಾವಾಣಿಯಲ್ಲಿ ಪ್ರಕಟವಾದ ರಾಮಚಂದ್ರ ಹೆಗಡೆ (ಹುಬ್ಬಳ್ಳಿ)ಯವರ ಪತ್ರ. (ಸ್ವಾಮೀಜಿಯ ಕ್ರಮ ಸರಿಯೇ? - ತಾ. ೨.೯.೦೮). "ಹವ್ಯಕ... ಹವ್ಯಕ..." ಎಂದು ಹಾವು ಮೆಟ್ಟಿದವರಂತೆ ಜರೆಯುವ ಮೊದಲು ಇವರು ಬೇರೆ ಸಮಾಜದವರ (ಉದಾ. ಉಡುಪಿ ಅಷ್ಟಮಠಗಳು : ಇಲ್ಲಿ ಬೇರೆ ಬ್ರಾಹ್ಮಣರಿಗೆ ಆಡಳಿತಾತ್ಮಕ ಅವಕಾಶವಿದೆಯೇ?... ಅಥವಾ ಲಿಂಗಾಯಿತ ಮಠ, ಇತ್ಯಾದಿ) ಮಠಗಳನ್ನು ನೋಡಲಿ. ಎಲ್ಲರೂ ತಮ್ಮ ತಮ್ಮ ಸಮಾಜ ಸಂಘಟನೆಗಳನ್ನು ಮಾಡಿಕೊಳ್ಳುತ್ತಿರುವಾಗ, ಹವ್ಯಕರು ಸಂಘಟಿತರಾಗುವುದು ಮಾತ್ರ ಅಪರಾಧವೇ? ನಾವು ಮಾತ್ರ ’ಜಾತ್ಯತೀತ’ ಎಂದು ಹಣೆಪಟ್ಟಿ ಹಚ್ಚಿಕೊಂಡು ಚೂರುಚೂರಾಗಿ ಹೋಗಬೇಕೇ? ಸಂಘಟಿತರಾಗಲು ಮನಸ್ಸಿಲ್ಲದಿದ್ದರೆ, ಕನಿಷ್ಠ ತಮ್ಮದೇ ಮನೆಯನ್ನು ಒಡೆಯುವ, ಒಡೆಸುವ ಕೆಲಸವನ್ನಾದರೂ ಮಾಡಬಾರದು.

ರಾಘವೇಶ್ವರಭಾರತೀ ಸ್ವಾಮಿಗಳು ಅತ್ಯಂತ ಸರಳ ಹೃದಯವಂತ, ಹಿಂದೂಧರ್ಮ ಕಳಕಳಿಯುಳ್ಳವರಾಗಿದ್ದು, ತಮ್ಮ ಪರಿಮಿತಿಯಲ್ಲಿ ಗೋ ಸಂರಕ್ಷಣೆ, ಶಿಕ್ಷಣವನ್ನೂ (ನಮ್ಮ ಮಕ್ಕಳಿಗೆ) ಸಂಯೋಜಿಸುತ್ತಿದ್ದಾರೆ. ಅಂತಹ ಗೌರವಾನ್ವಿತರನ್ನು ಲಾಭಬಡುಕ, ಖಳನಾಯಕನಂತೆ ಬಿಂಬಿಸುತ್ತಿರುವುದು ಸುಸಂಸ್ಕೃತರು ಒಪ್ಪತಕ್ಕ ವಿಚಾರವಲ್ಲ.

ಗೋಕರ್ಣದ ಅಭಿವೃದ್ಧಿಗೆ ಮಠದ ಆದಾಯ ಮೂಲಗಳನ್ನೂ ವಿನಿಯೋಗಿಸಲಾಗುವುದು ಎಂದು ಸ್ವಾಮೀಜಿ ಹೇಳಿದ್ದಾರೆ. ಗೋಕರ್ಣದಲ್ಲಿ ಗೊಂದಲ ಎಬ್ಬಿಸುತ್ತಿರುವವರು ಪಟ್ಟಭದ್ರ (ಹವ್ಯಕರೇ) ಹಿತಾಸಕ್ತಿಯವರು ಎಂಬುದನ್ನು ನಾವು ಗಮನಿಸಬೇಕು. ಇವರಿಗೆ ಸಾರ್ವತ್ರಿಕ ಬೆಂಬಲ ಇಲ್ಲ. ಇನ್ನು, ಧರ್ಮಸ್ಥಳಕ್ಕೆ ಕೊಡಿ... ಬೇರೆಯವರಿಗೆ ಕೊಡಿ... ಎಂಬುದು ವಿತಂಡವಾದವಾಗುತ್ತದೆ. ಗೋಕರ್ಣದಲ್ಲಿ ರಾ.ಮಠದ (ಐತಿಹಾಸಿಕ) ಪುರಾವೆಯೂ ಸಿಕ್ಕಿದೆ. ಎಲ್ಲವನ್ನೂ ಇಲ್ಲಿ ವಿವರಿಸಲು ಆಗುವುದಿಲ್ಲ.

ಇಳಿಮನೆ ಸುಭಾಶ್ಚಂದ್ರ ಹೆಗಡೆ, ಹುಬ್ಬಳ್ಳಿ
೯೪೪೮೮೬೯೦೯೧೨

2 comments:

ಸಿರಿರಮಣ said...

ಸುಭಾಶ್ಚಂದ್ರರ ಅಭಿಪ್ರಾಯ ಸೂಕ್ತವಾಗಿದೆ.

ವಿನಾಯಕ ಕೆ.ಎಸ್ said...

ಶ್ರೀ ಮಠದ ಬ್ಲಾಗ್ ತುಂಬಾ ಚೆನ್ನಾಗಿದೆ. ಲೇಖನಗಳನ್ನು ವಿಭಾಗಗಳಲ್ಲಿ ಪ್ರಕಟಿಸಿ, ಮಠದ ಕಾರ್ಯಚಟುವಟಿಕೆ ವರದಿಗಳನ್ನು ಇಲ್ಲಿ ಬಿತ್ತರಿಸಿ.