Tuesday, September 16, 2008

ಶ್ರೀ ರಾಘವೇಶ್ವರರೊಂದಿಗೆ ದೇಶದ ಎಲ್ಲ ಸಂತರಿದ್ದಾರೆ



(ಆತ್ಮಲಿಂಗವೇದಿಕೆ)ಗೋಕರ್ಣ : ದೇವಸ್ಥಾನಗಳು ಭಾರತದ ಆತ್ಮ, ಗೋಕರ್ಣ ಭಾರತದ ಆತ್ಮಸಾಕ್ಷಿ. ಇಂಥ ಪುಣ್ಯಕ್ಷೇತ್ರದ ಧಾರ್ಮಿಕ ಪುನರುತ್ಥಾನ ಕಾರ್ಯದಲ್ಲಿ ಇಡೀ ದೇಶದ ಸಾಧು ಸಂತರು ಶ್ರೀ ರಾಘವೇಶ್ವರರೊಂದಿಗೆ ಇದ್ದಾರೆ ಎಂದು ಪೇಜಾವರಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳು ಘೋಷಿಸಿದರು. ಅವರು ಸೋಮವಾರ ಇಲ್ಲಿನ ಭದ್ರಕಾಳಿ ಕಾಲೇಜ್ ಮೈದಾನದ ಆತ್ಮಲಿಂಗವೇದಿಕೆಯಲ್ಲಿ ನಡೆದ ಗೋಕರ್ಣ ಕ್ಷೇತ್ರ ಪುನರುತ್ಥಾನ ಮಹಾಸಂಕಲ್ಪ ಹಾಗೂ ಶ್ರೀ ರಾಘವೇಶ್ವರ ಶ್ರೀಗಳ ಸೀಮೋಲ್ಲಘನ ಕಾರ್ಯಕ್ರಮದಲ್ಲಿ ಮಾತನಾಡಿದರು. ಗೋಕರ್ಣದ ಕ್ಷೇತ್ರದ ಪುನರುತ್ಥಾನದ ಮಹಾಸಂಕಲ್ಪ ಕೇವಲ ಗೋಕರ್ಣದ ಅಭಿವೃದ್ಧಿ ಸಂಕಲ್ಪವಲ್ಲ, ಇದು ಸಂಪೂರ್ಣ ದೇಶದ ಅಭಿವೃದ್ಧಿ ಮಹಾಸಂಕಲ್ಪ. ಯಾವುದೇ ಮಂತ್ರಕ್ಕೆ ಒಬ್ಬ ಋಷಿ ಅಪತಿಯಾಗಿರುತ್ತಾನೆ.ಅದೇ ರೀತಿ ಇಲ್ಲಿ ಗೋಕರ್ಣದ ಅಭಿವೃದ್ಧಿ ಮಂತ್ರದ ಅಪತಿ ರಾಘವೇಶ್ವರ ಶ್ರೀಗಳು. ಇದು ರಾಮಚಂದ್ರಾಪುರ ಮಠದ ನೇತೃತ್ವದಲ್ಲಿ ಧಾರ್ಮಿಕ, ಅಧ್ಯಾತ್ಮಿಕ ಹಾಗೂ ಭೌತಿಕ ಅಭಿವೃದ್ಧಿಯಾಗಲಿದೆ ಎಂಬ ವಿಶ್ವಾಸವಿದೆ. ಇದಕ್ಕೆ ಸಾಧು ಸಂತರಾದ ನಾವೆಲ್ಲರೂ ಕೈ ಜೋಡಿಸೋಣ ಎಂದರು. ಭಾರತದ ತಾಯಿ ಬೇರುಗಳೆಂದರೆ ಪುಣ್ಯಕ್ಷೇತ್ರಗಳು. ಇಂಥ ಪುಣ್ಯಕ್ಷೇತ್ರಗಳಿಗೆ ನೀರೆರೆದು ಬೆಳೆಸಿದರೆ ಮಾತ್ರ ಧಾರ್ಮಿಕ ಪುನರುತ್ಥಾನ,ಆ ಮೂಲಕ ಭಾರತದ ಪುನರುತ್ಥಾನವಾಗಲಿದೆ ಎಂದರು. ಹಿಂದೂ ಧರ್ಮಗಳನ್ನು ಯಾರಿಂದಲೂ ಕಿತ್ತೊಗೆಯಲು ಸಾಧ್ಯವಿಲ್ಲ. ಯಾಕೆಂದರೆ ಇಲ್ಲಿನ ದೇಗುಲಗಳು ನಮ್ಮ ದೇಶದ ಮೇಲಿನ ಎಲ್ಲ ಆಕ್ರಮಣಗಳನ್ನು ಎದುರಿಸಿ ನಿಂತಿವೆ, ಮುಂದೆಯೂ ನಿಲ್ಲುತ್ತ. ಸರಕಾರ, ಸಮಾಜ ಹಾಗೂ ಸನ್ಯಾಸಿಗಳು ಪರಸ್ಪರ ಒಗ್ಗೂಡಿದರೆ ದೇಶಕ್ಕೆ ಯಾವುದೇ ಆಪತ್ತು ಬರುವುದೇ ಇಲ್ಲ. ಇಲ್ಲಿ ಅಂಥದ್ದು ನಡೆದಿದೆ. ಇದಕ್ಕೆ ಸಾಧು ಸಂತರು ಬೆಂಬಲಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು. ಮೂರುಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ಇಡೀ ವಿಶ್ವದೆಲ್ಲೆಡೆ ಗೋಧ್ವಜ ಹಾರಿಸುವ ಸಂಕಲ್ಪತೊಟ್ಟಿರುವ ಶ್ರೀ ರಾಘವೇಶ್ವರ ಶ್ರೀಗಳು ಇಲ್ಲಿ ಎಲ್ಲರಿಗೂ ಗೋಕರ್ಣ ಕ್ಷೇತ್ರದ ಪುನರುತ್ಥಾನದ ಮಹಾಸಂಕಲ್ಪದ ದೀಕ್ಷೆ ಬೋಸಿದ್ದಾರೆ. ಅವರು ಗೋವಿನ ವಿಷಯದಲ್ಲಿ ಇದನ್ನು ಮಾಡುತ್ತಿದ್ದಾರೆ. ಖಂಡಿತಕ್ಕೂ ಗೋಕರ್ಣದ ವಿಷಯದಲ್ಲಿಯೂ ಹೀಗೆಯೇ ಆಗಲಿದೆ ಎಂದರು. ರಾಘವೇಶ್ವರ ಶ್ರೀಗಳು ಗೋವಿಗೇ ಜಗದ್ಗುರು ಪಟ್ಟ ನೀಡಿದ ಸಂತರು.ಅಂಥವರು ಈಗ ಗೋಕರ್ಣ ಪುನರುತ್ಥಾನದ ಸಂಕಲ್ಪ ತೊಟಿದ್ದಾರೆ. ಇದಕ್ಕೆ ಸಾಧು ಸಂತರಾದ ನಾವೆಲ್ಲ ಕೈಜೋಡಿಸೋಣ ಎಂದರು. ಸಚಿವ ಹರತಾಳ ಹಾಲಪ್ಪ ಮಾತನಾಡಿ, ಸರಕಾರ ಗೋಕರ್ಣವನ್ನು ರಾಮಚಂದ್ರಾಪುರಮಠಕ್ಕೆ ಹಸ್ತಾಂತರಿಸಿರುವುದನ್ನು ವಿರೋಸುವವರು ಈ ಬಗ್ಗೆ ಸರಕಾgದೊಂದಿಗೆ ಮಾತಾಡಲಿ, ಶ್ರೀಮಠದೊಟ್ಟಿಗೆ ಮಾತಾಡಿ ಬಗೆ ಹರಿಸಿಕೊಳ್ಳಬೇಕು ಎಂಬುದು ನನ್ನ ಸಲಹೆ. ಗೋಕರ್ಣ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗುವುದರ ಬಗ್ಗೆ ಈಗ ಯೋಚಿಸಬೇಕಾಗಿದೆ.ಗಣಪತಿ ರಾವಣನಿಂದ ಗುದ್ದು ತಿಂದು ಇಡೀ ಜಗತ್ತಿಗೇ ಮಂಗಲ ಮಾಡಿದ್ದಾನೆ. ಹಾಗೆಯೇ ನಾವು ಕೂಡ ಯಾರಾದರೂ ಗುದ್ದು ನೀಡಿದರೆ ಅದನ್ನು ಧನಾತ್ಮಕವಾಗಿ ಸ್ವೀಕರಿಸಿ ಗೋಕರ್ಣದ ಅಭಿವೃದ್ಧಿ ಮಾಡೋಣ ಎಂದರು. ಸಚಿವ ವಿಶ್ವೇಶ್ವ ಹೆಗಡೆ ಕಾಗೇರಿ ಸರಕಾರ ಯೋಚಿಸಿಯೇ ತೀರ್ಮಾನ ಮಾಡಿದೆ.ಇದಕ್ಕಾಗಿ ಸರಕಾರವನ್ನು ಅಭಿನಂದಿಸುತ್ತೇನೆ ಎಂದರು. ಜೇವರ್ಗಿಯ ಶ್ರೀ ಸೋಪಾನನಾಥ ಸ್ವಾಮೀಜಿ, ಶ್ರೀ ರಮಾನಂದ ಸ್ವಾಮೀಜಿ, ಶ್ರೀ ಸಿದ್ಧಲಿಂಗೇಶ್ವರ ಸ್ವಾಮೀಜಿ, ಮಾಜಿ ಸಚಿವರಾದ ನಾಗರಾಜ ಶೆಟ್ಟಿ, ಶಿವಾನಂದ ನಾಯ್ಕ, ಶಾಸಕರಾದ ಜೆ.ಡಿ.ನಾಯ್ಕ, ಜೇವರ್ಗಿ ಶಾಸಕ ದೊಡ್ಡನಗೌಡ ಪಾಟೀಲ ಮುಂತಾದವರು ಉಪಸ್ಥಿತರಿದ್ದರು. ಇದಕ್ಕೂ ಮೊದಲು ಕುಮಟಾ ಶಾಸಕ ದಿನಕರ ಶೆಟ್ಟಿ ಸ್ವಾಗತಿಸಿದರು. ಪ್ರಮೋದ ಹೆಗಡೆ ಸಭಾ ಪೂಜೆ ನೆರವೇರಿಸಿದರು. ಮಹಾಸಂಕಲ್ಪ ಬೋಧನೆ: ಸೇರಿದ್ದ ಐವತ್ತು ಸಾವಿರಕ್ಕೂ ಹೆಚ್ಚು ಜನರಿಗೆ ರಾಘವೇಶ್ವರ ಶ್ರೀಗಳು ಗೋಕರ್ಣ ಕ್ಷೇತ್ರದ ಪುನರುತ್ಥಾನದ ಮಹಾಸಂಕಲ್ಪ ಬೋಸಿದರು. ಶ್ರೀಗಳ ಧ್ವನಿಗೆ ಎಲ್ಲರೂ ಧ್ವನಿ ಗೂಡಿಸಿದರು. ಇದಕ್ಕೂ ಮೊದಲು ಹವ್ಯಕ, ನಾಮಧಾರಿ, ಹಾಲಕ್ಕಿ, ನಾಡೋರ, ಗೌಡ ಸಾರಸ್ವತ, ಸಾರಸ್ವತ, ದೈವಜ್ಞ, ದೇಶಭಂಡಾರಿ, ಭಂಡಾರಿ,ಮಡಿವಾಳ, ಗಾಣಿಗ, ಮೊಗೇರ, ಅಂಬಿಗ, ಹರಿಕಂತ್ರ, ವಾಲ್ಮೀಕಿ, ಗಾಡಿಗ, ಗಾವಿತ, ಪಟಗಾರ ಒಕ್ಕಲಿಗ, ಗಾವಡಿ ಮುಂತಾದ ಅನೇಕ ಸಮುದಾಯದ ಮುಖಂಡರು ರಾಘವೇಶ್ವರ ಶ್ರೀಗಳಿಗೆ ಫಲ ಸಮರ್ಪಣೆ ಮಾಡಿದರು.




COMMENTS:
At 16 September, 2008 , Ramesh said...
ನಿಮ್ಮ ಲೇಖನವನ್ನು ಓದಿದರೇ ನಾವೇ ಗೋಕರ್ಣಕ್ಕೆ ಹೋಗಿ ಬಂದ ಹಾಗಿದೆ. ವಸ್ತುಸ್ತಿತಿಯನ್ನು ನೀವಿಲ್ಲಿ ತುಂಬಾ ಸುಂದರವಾಗಿ ವಿವರಿಸಿದ್ದೀರ. ಧನ್ಯವಾದಗಳು.

ಸಾವಿರ ಸಾವಿರ ಸಂಖ್ಯೆಯಲ್ಲಿ ಜನರು ಸೇರುತ್ತಾರೆ ಎಂದರೆ ಅದು ಶ್ರೀರಾಘವೇಶ್ವರರಿಗೆ ಎಷ್ಟು ಸಂಘಟನಾ ಶಕ್ತಿಯಿದೆ ಎಂಬುದನ್ನು ತೋರಿಸುತ್ತದೆ. ಜನರಿಗೆ ರಾಘವೇಶ್ವರರ ಮೇಲೆ ಎಷ್ಟು ಪ್ರೀತಿ, ನಂಬಿಕೆ, ಭಕ್ತಿಯಿದೆ ಎನ್ನುವುದನ್ನು ತೋರಿಸುತ್ತದೆ.

ಇಂದಿನ ಜನರಲ್ಲಿ ಜೀವನವೆಂದರೆ ಬರಿ ದುಡ್ಡು ಅಂತ ಮನಸ್ಸಲ್ಲಿ ಬೆಳೆದು ಬಂದಿದೆ. ದುಡ್ಡಿದ್ದರೆ ಮಾತ್ರ ನಾವು ಸುಖವಾಗಿ ಇರಬಬುದು ಎನ್ನುವ ಹುಚ್ಚು ಕಲ್ಪನೆ ಬಂದಿದೆ. ದುಡ್ಡು ಮಾಡಲು ಎಂತ ಹೇಯ ಕೆಲಸಕ್ಕೂ ಮನಸ್ಸು ಮಾಡುವರು. ಯಾವು ಸತ್ಯ, ಯಾವುದು ಮಿಥ್ಯ ಎನ್ನುವ ಅರಿವೇ ಇರುವುದಿಲ್ಲ. ಇದನ್ನು ನಾವು ಎಲ್ಲ ರಂಗದಲ್ಲಿಯೂ ಕಾಣಬಹುದು. ಸಮಾಜಕ್ಕೆ ನೈಜ ಸ್ಥಿತಿಯನ್ನು ತಲುಪಿಸುವಲ್ಲಿ ಮಾಧ್ಯಮದ ಪಾತ್ರ ಬಹಳ ಮುಖ್ಯವಾದುದು. ಒಂದು ಘಟನೆಯನ್ನು ಎಲ್ಲ ರೀತಿಯಿಂದ ಅವಲೋಕಿಸಿ ಅದನ್ನು ಮಾಧ್ಯಮದಲ್ಲಿ ಪ್ರಕಟಿಸಬೇಕು. ಏಕಮುಖವಾಗಿರಬಾರದು.

ಇದನ್ನು ಇಲ್ಲಿ ಯಾಕೆ ಪ್ರಸ್ಥಾಪ ಮಾಡುತ್ತಿದ್ದೇನೆಂದರೇ, ನಿನ್ನೆ ನಾನು ಡಿ.ಡಿ. ಚಂದನದಲ್ಲಿ ಗೋಕರ್ಣದ ನೇರ ಪ್ರಸಾರವನ್ನು ವೀಕ್ಷಿಸುತ್ತಿದೆ. ಒಮ್ಮೆ ಟಿ.ವಿ.೯ ರಲ್ಲಿ ಗೋಕರ್ಣದ ಬಗ್ಗೆ ಎನು ಬರುತ್ತಿರಬಹುದೆಂದು ನೋಡಿದೆ. ಅಲ್ಲಿಯ ವರದಿ ನೋಡಿ ಆಶ್ಚರ್ಯವಾಯಿತು. ಅಲ್ಲಿ ಗೋಕರ್ಣದ ಬಗ್ಗೆ ಎನೂ ಬರುತ್ತಿರಲಿಲ್ಲ. ಒಂದು ಸ್ಥಳದಲ್ಲಿ ಸಾವಿರ ಸಾವಿರ ಸಂಖ್ಯೆಯ ಜನರು ಸೇರಿದ್ದು ಒಂದು ಮಹಾಸಂಕಲ್ಪವಾಗುತ್ತಿದ್ದುದರ ಸುಳಿವಿರಲಿಲ್ಲ. ಅದರ ಬದಲು "ಗೋಕರ್ಣ ಹಸ್ತಾಂತರ ವಿವಾದ" ಸ್ವರ್ಣವಲ್ಲಿಯಲ್ಲಿ ವಿವಿಧ ಮಠಾದೀಶರ ಸಭೆ. ಸಭೆಯಲ್ಲಿ ಪೇಜಾವರ ಶ್ರೀಗಳು ಅಂತಿತ್ತು. ಅತ್ತ ಚಂದನದಲ್ಲಿ ಪೇಜಾವರ ಶ್ರೀಗಳು ಗೋಕರ್ಣದ ಆತ್ಮಲಿಂಗ ವೇದಿಕೆಯಲ್ಲಿದ್ದು, ಇದು ಸರಿಯಾದ ನಿರ್ದಾರ ಅಂತ ಹೇಳುತ್ತಿದ್ದರೆ ಇಲ್ಲಿ ವರದಿಯನ್ನು ತಿರುಚಲಾಗಿತ್ತು.

ನಿಜವಾದ ಘಟನೆಯೇನೆಂದರೇ, ಪೇಜಾವರ ಶ್ರೀಗಳು ಗೋಕರ್ಣಕ್ಕೆ ಬರುವ ಮಾರ್ಗ ಮದ್ಯೆ ಸ್ವರ್ಣವಲ್ಲಿಗೆ ಹೋಗಿ ಎಲ್ಲರೂ ಸೇರಿ ಬಗೆಹರಿಸೋಣವೆಂದು ಬುದ್ದಿಮಾತು ಹೇಳಿಬಂದಿದ್ದರು. ಆದರೆ ಅದು ಟಿ.ವಿ.೯ ನಲ್ಲಿ ಪ್ರಕಟವಾಗಲೇ ಇಲ್ಲ. ಕೊನೆಗೆ ಟಿ.ವಿ.೯ ರವರು ಪೇಜಾವರ ಶ್ರೀಗಳವರ ಹತ್ತಿರ ದೂರವಾಣಿಯೊಂದಿಗೆ ಮಾತನಾಡಿದಾಗ ಅವರು ಮತ್ತೆ ಹೇಳಿದ್ದು ಗೋಕರ್ಣ ರಾಘವೇಶ್ವರರಿಂದ ಉನ್ನತ ಸ್ಥಿತಿಯತ್ತ ತಲುಪುತ್ತದೆ. ನಮ್ಮದು ಯಾವುದೇ ವಿರೋದವಿಲ್ಲ. ನಾವು ಪರವಾಗಿದ್ದೇವೆ ಎಂದು. ಅಷ್ಟಾದರೂ ಟಿ.ವಿ.೯ ನಲ್ಲಿ ಗೋಕರ್ಣ ಹಸ್ತಾಂತರದ ಬಗ್ಗೆ ಬರುತ್ತಾಯಿತ್ತು. ಬಹುಶಃ ಅಲ್ಲಿ ಕಾಣದ ವ್ಯಕ್ತಿಗಳ ಕೈವಾಡವಿರಬಹುದು.

ಎಲ್ಲಿಯೇ ತಪ್ಪಿದ್ದರೂ ಅದನ್ನು ಸರಿಪಡಿಸಬೇಕು. ಆಗಲೇ ಸಮಾಜ ಉದ್ದಾರವಾಗುತ್ತದೆ. ಆದರೆ ಆ ಘಟನೆಯನ್ನು ಏಕಮುಖವಾಗಿ ನೋಡಬಾರದು. ಎಲ್ಲ ರೀತಿಯಿಂದ ಅವಲೋಕಿಸಿ, ಸಂಬಂದಪಟ್ಟ ವ್ಯಕ್ತಿಗಳ ಹತ್ತಿರ ಚರ್ಚಿಸಿ ಅದನ್ನು ಸರಿಪಡಿಸಲು ಪ್ರಯತ್ಸಿಸಬೇಕು. ಮನಸ್ಸಿಗೆ ಬಂದಂತೆ ಪ್ರಕಟಿಸುವುದಲ್ಲ. ಪ್ರಜ್ಞಾವಂತ ಓದುಗ/ವೀಕ್ಷಕ ಎಲ್ಲವನ್ನೂ ಗಮನಿಸುತ್ತಿರುತ್ತಾನೆ.


At 17 September, 2008 , Ramesh said...
ಆತ್ಮೀಯರೇ,

"ಗೋ ಕರಣ" ಹಸ್ತಾಂತರವನ್ನು ಸ್ವರ್ಣವಲ್ಲಿ ಶ್ರೀಗಳು ಯಾಕೆ ವಿರೋದಿಸುತ್ತಿದ್ದಾರೆ ಎನ್ನುವುದು ನಿಗೂಡವಾಗಿದ್ದು ಅದರ ಬಗ್ಗೆ ಹುಡುಕಿದಾಗ ಸಿಕ್ಕಿದ್ದು http://bimbapratibimba.blogspot.com/ ಬ್ಲಾಗ್.

ಇಲ್ಲಿ ನೀವೂ ಬ್ಲಾಗಿಸಿ

No comments: